ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು, ಆಗ ಎಲ್ಲವೂ ಸರಿಯಾಗುತ್ತದೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿ ತಮ್ಮ ಹೇಳಿಕೆಗೆ ಬುಧವಾರ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸ್ವಾಮೀಜಿ, “ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಿನ್ನೆಯ ದಿನ ತಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ಹೃತ್ತೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ.” ಎಂದು ಹೇಳಿದ್ದಾರೆ. “ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳು. ನಾವು ಎಲ್ಲಾ ಧರ್ಮದವರನ್ನು ಇಲ್ಲಿಯವರೆಗೂ ಸಮಾನವಾಗಿಯೇ ಕಂಡಿರುತ್ತೇವೆ. ನಮ್ಮ ಶ್ರೀಮಠಕ್ಕೆ ಮುಸ್ಲಿಮರು ಸಹ ಸಂಪರ್ಕವಿಟ್ಟುಕೊಂಡು ಬಂದು ಹೋಗುತ್ತಿರುತ್ತಾರೆ. ನಾವು ಸಹ ಮುಸ್ಲಿಮರ ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಭಾಗಿಯಾಗಿರುತ್ತೇವೆ. ಆದ್ದರಿಂದ ಈ ಜನಾಂಗದ ಬಗ್ಗೆ ಯಾವುದೇ ಅಸಹಿಷ್ಣುತೆ ಹೊಂದಿಲ್ಲ” ಎಂದು ಸ್ಪಷ್ಟನೆ ನೀಡಿರುವ ಸ್ವಾಮೀಜಿ, ಆ ಹೇಳಿಕೆ ವಿಚಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ವಕ್ಫ್ ಕಾಯಿದೆ ವಿರುದ್ಧವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿಯ ಸಹ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡುತ್ತಾ,“ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಮುಸ್ಲಿಂ ಜನಾಂಗಕ್ಕೆ ಮತದಾನದ ಹಕ್ಕೇ ಇಲ್ಲದಂತೆ ಕಾನೂನು ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಖಂಡಿತ ಅದನ್ನು ಮಾಡಬೇಕು. ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿವಾದವು ತೀವ್ರಗೊಳ್ಳುತ್ತಿದ್ದಂತೆ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆ ಕೇಳಿದ್ದಾರೆ.
Share