ಜೈಪುರ: ಸೂಫಿ ಸಂತ ಅಜ್ಮೀರ್ ನ ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ‘ಚಾದರ್’ ಅನ್ನು ಅವರ ಪರವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದರ್ಗಾಕ್ಕೆ ಶನಿವಾರ ಸಮರ್ಪಿಸಿದರು. ಭಾರಿ ಭದ್ರತೆಯೊಂದಿಗೆ ಸಚಿವರು ದರ್ಗಾಕ್ಕೆ ಆಗಮಿಸಿದರು. ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಬಂದ ಅವರು, ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅಜ್ಮೀರ್ಗೆ ತಲುಪಿದರು. ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಅವರನ್ನು ಬರಮಾಡಿಕೊಂಡರು. ‘ಪ್ರಧಾನ ಮಂತ್ರಿಯವರ ಸಹೋದರತ್ವದ ಹಾಗೂ ದೇಶ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶದೊಂದಿಗೆ ಅಜ್ಮೀರ್ಗೆ ತೆರಳುತ್ತಿದ್ದೇನೆ’ ಎಂದು ರಿಜಿಜು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಹೇಳಿದರು. ನೀವು ಹಿಂದುವೋ, ಮುಸಲ್ಮಾನನೋ, ಕ್ರೈಸ್ತನೋ, ಪಾರ್ಸಿಯೋ, ಬುದ್ಧನೋ ಅಥವಾ ಜೈನನೋ ಎಲ್ಲರನ್ನೂ ದರ್ಗಾದಲ್ಲಿ ಸ್ವಾಗತಿಸಲಾಗುತ್ತದೆ. ಲಕ್ಷಾಂತರ ಜನರು ದರ್ಗಾಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಯಾವ ತೊಂದರೆಯೂ ಆಗಕೂಡದು. ಪ್ರಕ್ರಿಯೆ ಸರಳವಾಗಿರಬೇಕು ಎಂದು ಅವರು ಹೇಳಿದರು. ದರ್ಗಾವನ್ನು ಶಿವ ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ನಾನು ಇಲ್ಲಿ ಚಾದರ್ ಅರ್ಪಿಸಲಷ್ಟೇ ಬಂದಿದ್ದೇನೆ’ ಎಂದರು.
Share