15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್, ಡೀಸೆಲ್ ನೀಡುವುದಿಲ್ಲ ಎಂದು ದೆಹಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಶನಿವಾರ ಪ್ರಕಟಿಸಿದ್ದಾರೆ.
ಮಾರ್ಚ್ 31 ರ ನಂತರ ಈ ನಿಯಮ ಜಾರಿಗೆ ಬರಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದಾದ್ಯಂತ ಪೆಟ್ರೋಲ್ ಬಂಕ್ ಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ಸರ್ಕಾರ ನಿಲ್ಲಿಸಲಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್ ಗಳಲ್ಲಿ ಹಳೆಯ ವಾಹನಗಳಿಗೆ ಇಂಧನ ತುಂಬಿಸುವಂತಿಲ್ಲ. ಹಳೆಯ ವಾಹನಗಳನ್ನು ಗುರುತಿಸಲು ವಿಶೇಷ ತಂಡ ರಚನೆ ಮಾಡಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಹೋಟೆಲ್ಗಳಲ್ಲಿ ಹೊಗೆ ನಿರೋಧಕ ಅಳವಡಿಕೆ ಕಡ್ಡಾಯ ಎಂದು ಹೇಳಿದ್ದಾರೆ.
ವಾಯುಮಾಲಿನ್ಯದ ಸಂದರ್ಭದಲ್ಲಿ ಮೋಡ ಬಿತ್ತನೆಗೆ ತಯಾರಿ ಮಾಡಲಾಗಿದೆ. ಖಾಲಿ ಇರುವ ಸ್ಥಳಗಳಲ್ಲಿ ಗಿಡ-ಮರಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
Share